ಸಂಪಾಜೆ ಯಕ್ಷೋತ್ಸವ ರಜತ ಸಂಭ್ರಮ ಸಮಾರೋಪ
ಲೇಖಕರು : ವಿಜಯ ಕರ್ನಾಟಕ
ಸೋಮವಾರ, ನವ೦ಬರ್ 16 , 2015
|
ನವ೦ಬರ್ 16, 2015
|
ಸಂಪಾಜೆ ಯಕ್ಷೋತ್ಸವ ರಜತ ಸಂಭ್ರಮ ಸಮಾರೋಪ
ಸುಳ್ಯ :
ಕಲೆಯನ್ನು ಉಳಿಸಿ ಬೆಳೆಸುವ ಪ್ರತಿಷ್ಠಾನದ ಕಾರ್ಯ ಅನನ್ಯ. ಈ ಕಲಾ ಸೇವೆಯನ್ನು ಕಲಾಶಕ್ತರು ಮಾತ್ರವಲ್ಲ, ದೇವರು ಕೂಡ ಮೆಚ್ಚುತ್ತಾರೆ. ಯಕ್ಷಗಾನದ ಶ್ರೇಯೋಭಿವೃದ್ಧಿಗೆ ಪ್ರತಿಷ್ಠಾನ ಬಹುದೊಡ್ಡ ಕೊಡುಗೆ ನೀಡುತ್ತಾ ಬರುತ್ತಿದೆ. ಇದಲ್ಲದೆ ಕಲಾವಿದರನ್ನೂ ಗೌರವವಿತವಾಗಿ ನಡೆಸಿಕೊಳ್ಳುತ್ತಿದೆ ಎಂದು ಎಡನೀರು ಮಠದ ಶ್ರೀಶ್ರೀಕೇಶವಾನಂದ ಸ್ವಾಮೀಜಿಯವರು ನುಡಿದರು.
ಅವರು ಸಂಪಾಜೆಯಲ್ಲಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ನಡೆದ ಸಂಪಾಜೆ ಯಕ್ಷೋತ್ಸವದ ರಜತ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣ, ಚಿಕಿತ್ಸೆಗೆ ನೆರವು, ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳಿಗೆ ಸಹಾಯಧನವನ್ನು ಪ್ರತಿಷ್ಠಾನ ವತಿಯಿಂದ ನೀಡುತ್ತಾ ಬರುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು.
ವೇದಿಕೆಯಲ್ಲಿ ವೇ.ಮೂ. ಪರಕ್ಕಜೆ ಗಣಪತಿ ಭಟ್ ಮತ್ತು ಇಪ್ಪತೈದು ವರ್ಷ ಭಾಗವಹಿಸಿದ ಶ್ರೇಷ್ಠ ಕಲಾವಿದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಕ್ಷೋತ್ಸವ ರೂವಾರಿ ಹಾಗೂ ಕಲಾಪೋಷಕ ಟಿ.ಶ್ಯಾಂ ಭಟ್ ಅವರನ್ನು ಗೌರವಿಸಲಾಯಿತು. ಪ್ರತಿಷ್ಠಾನದ ಖಜಾಂಜಿ ಕೆ.ಜಿ.ಮುರಳಿ ಕಾರ್ಯಕ್ರಮಕ್ಕೆ ಸಹಕರಿಸಿದರು. ವೇ.ಮೂ. ಹಿರಣ್ಯ ವೆಂಕಟೇಶ್ವರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಖ್ಯಾತ ಸಂಗೀತ ಕಲಾವಿದೆ ಸಂಗೀತ ಕಟ್ಟಿ ಅವರಿಂದ ಸಂಗೀತ ಗಾನಸುಧಾ ಕಾರ್ಯಕ್ರಮ ನಡೆಯಿತು. ಪ್ರಸಿದ್ಧ ಹಿರಿಯ, ಕಿರಿಯ ನೂರಕ್ಕೂ ಮಿಕ್ಕಿ ಕಲಾವಿದರಿಣದ ರತ್ನಾವತಿ ಕಲ್ಯಾಣ, ಅಷ್ಟಾಕ್ಷರಿ ಮಹಿಮೆ, ಗಂಧರ್ವ ಕನ್ಯೆ, ಶ್ರೀದೇವಿ ಮೂಕಾಂಬಿಕೆ, ಮಾಯಾಮಾರುತೇಯ ಯಕ್ಷಗಾನ ನಡೆಯಿತು.
367ಮಂದಿಗೆ ನೆರವು: ಶಿಕ್ಷಣ, ಚಿಕಿತ್ಸೆಗೆ ನೆರವು, ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳಿಗೆ ಸಹಾಯಧನ ಹೀಗೆ ಬಂದ ಅರ್ಜಿಗಳಲ್ಲಿ ಅರ್ಹವಾದ 367 ಮಂದಿಗೆ ನೆರವು ನೀಡಲಾಯಿತು. ಯಕ್ಷೋತ್ಸವ ಶನಿವಾರ ಬೆಳಗ್ಗೆ 9.30ಕ್ಕೆ ಸಂಗೀತ ಗಾನ ಸುಧಾದೊಂದಿಗೆ ಆರಂಭಗೊಂಡು ಬಳಿಕ ಸಭಾಕಾರ್ಯಕ್ರಮ ಸನ್ಮಾನ, ಪ್ರಶಸ್ತಿ ವಿತರಣೆ ನಡೆಯಿತು. ಮಧ್ಯಾಹ್ನ 2.30ಕ್ಕೆ ಆರಂಭಗೊಂಡ ಯಕ್ಷಗಾನ ಭಾನುವಾರ ಮಧ್ಯಾಹ್ನ 12 ಗಂಟೆವರೆಗೆ ನಡೆಯಿತು. ಈ ಭಾರಿ ಯಕ್ಷೋತ್ಸವದಲ್ಲಿ 27 ಗಂಟೆಗಳ ಕಾಲ ನಿರಂತರ ಕಾರ್ಯಕ್ರಮ ನಡೆದು ದಾಖಲೆಯಾಗಿದೆ. ನಿಷೇಧಾಜ್ಞೆ ನಡುವೆ ಪ್ರಾರಂಭದಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದ್ದು, ಸಂಜೆಯಾಗುತ್ತಿದಂತೆ ಕಿಕ್ಕಿರಿದು ನೆರೆದರು.
ಕೃಪೆ :
vijaykarnataka
|
|
|